ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು. ಭಾರತ ಸಂವಿಧಾನವನ್ನು ಅಂಗೀಕರಿಸುವ ಮೊದಲೇ ಮೈಸೂರು ಸಂಸ್ಥಾನದಲ್ಲಿ (1907) ಮೇಲ್ಮನೆ ಸ್ಥಾಪನೆಯಾಗಿತ್ತು. ಮುಂದೆ ರಾಷ್ಟ್ರ ಮಟ್ಟದಲ್ಲಿ ‘ರಾಜ್ಯಸಭೆ’ ಸ್ಥಾಪನೆಗೂ ಇದು ಸ್ಫೂರ್ತಿಯಾಯಿತು. 1914ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದಾಗ ನ್ಯಾಯವಿಧೇಯಕ ಸಭೆಯ ಸಂಖ್ಯೆಯನ್ನು 18ಕ್ಕೆ ನಿಗದಿಪಡಿಸಿದರು. ಆ ಪೈಕಿ ನಾಲ್ವರನ್ನು ಮೈಸೂರು ಪ್ರಜಾ ಪ್ರತಿನಿಧಿ ಸಭೆಯಿಂದ, ಉಳಿದ ನಾಲ್ವರನ್ನು ಎಂಟು ಜಿಲ್ಲೆಗಳಿಂದ ಆರಿಸುವಂತೆ ಹಾಗೂ ಮುಸಲ್ಮಾನರು, ಕ್ರೈಸ್ತರು, ಕೆಳವರ್ಗದ ಜನರನ್ನು ನಾಮನಿರ್ದೇಶನ ಮಾಡುವ ನಿಯಮಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ತು ಮತ್ತು ರಾಜ್ಯಸಭೆ ಪ್ರತಿಭಾವಂತರು ರಾಜಕೀಯ ವ್ಯವಸ್ಥೆಯಲ್ಲಿ ಅವಕಾಶ ಮಾಡಿಕೊಡಲು ಇರುವ ವ್ಯವಸ್ಥೆ.ಇದಕ್ಕೆ ಅತ್ಯುತ್ತಮ ಸಾಕ್ಷಿ ಎಂದರೆ, ಡಾ. ಬಿ.ಆರ್.ಅಂಬೇಡ್ಕರ್‌ ಅವರನ್ನು ಪ್ರಜ್ಞಾಪೂರ್ವಕವಾಗಿ ರಾಜ್ಯಸಭೆಗೆ ಆರಿಸಿ, ಸಂವಿಧಾನ ರಚನೆಯಂತಹ ಮಹತ್ವದ ಕೆಲಸವನ್ನು ಸಾಧ್ಯಮಾಡಲಾಯಿತು. ಮೌಲಿಕವಾದ ವಿಚಾರಧಾರೆ,ಚರ್ಚೆಯಿಂದ ಮೇಲ್ಮನೆ ಒಂದು ಅಂಕುಶದಂತೆ ಕಾರ್ಯ ನಿರ್ವಹಿಸುತ್ತದೆ. ಶಾಸನ ನಿರೂಪಣೆ ಮತ್ತು ಆಡಳಿತ ವಿಚಾರಗಳಲ್ಲಿ ಸರ್ಕಾರಕ್ಕೆ ಸಹಕಾರಿಯಾಗಲೆಂಬ ಉದಾರ ಆಶಯದಿಂದ ಕರ್ನಾಟಕ ವಿಧಾನ ಪರಿಷತ್ತು ಅಸ್ತಿತ್ವಕ್ಕೆ ಬಂತು. ಭಾಷಾವಾರು ರಾಜ್ಯ ರಚನೆ, ಪ್ರಾಂತ್ಯಗಳ ಪುನರ್ವಿಂಗಡಣೆಯಾದ ನಂತರ ಆಯಾ ರಾಜ್ಯಗಳ ವ್ಯಾಪ್ತಿ, ಜನಸಂಖ್ಯೆ, ಅವಶ್ಯಕತೆಗೆ ತಕ್ಕಂತೆ ಮೇಲ್ಮನೆ ರಚಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ವಿವೇಚನೆಯನ್ನು ರಾಜ್ಯಗಳಿಗೆ ನೀಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ತು ರಚನೆಯಿಂದ ತಜ್ಞರೂ, ಅನುಭವಿಗಳೂ ಆದಕೆ.ಟಿ.ಭಾಷ್ಯಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಂ.ಪಿ.ಎನ್.ಶಾಸ್ತ್ರಿ, ಬಸವರಾಜ ಕಟ್ಟೀಮನಿ, ಬಿ.ಜಯಮ್ಮ, ಅಕ್ಬರ್ ಅಲಿ ಮುಂತಾದ ಅನೇಕ ಮಹನೀಯರು ಶಾಸನಸಭೆ ಪ್ರವೇಶಿಸಲು ಸಾಧ್ಯವಾಯಿತು. ಹೀಗೆ ರಾಜಕೀಯ ಪಕ್ಷಗಳ ದಾಕ್ಷಿಣ್ಯದಿಂದ ಮುಕ್ತರಾದ, ಪೂರ್ವಗ್ರಹಪೀಡಿತರಾಗದ, ಹಿರಿಯರ ಹಾಗೂ ತಜ್ಞರ ಸಲಹೆ-ಸೂಚನೆಗಳು ಸಿಗಬೇಕೆಂಬುದು ಮೇಲ್ಮನೆ ರಚನೆಯ ಉದ್ದೇಶ. ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ ಹತ್ತು ವರ್ಷ ಪ್ರಧಾನಿಯಾಗಿದ್ದ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್ ಡಾ. ಮನಮೋಹನ್ ಸಿಂಗ್ ರಾಜ್ಯಸಭಾ ಸದಸ್ಯರಾಗಿದ್ದರು.ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಪರಿಚಯಿಸಿದ ಅಬ್ದುಲ್ ನಜೀರ್‌ಸಾಬ್, ವೈಕುಂಠ ಬಾಳಿಗಾ, ರಾಮಕೃಷ್ಣ ಹೆಗಡೆ, ಎ.ಕೆ.ಸುಬ್ಬಯ್ಯ, ಮೈಸೂರು ಗೀತಾ ಬುಕ್‌ಹೌಸ್‌ನ ಸತ್ಯನಾರಾಯಣ, ಮಳ್ಳೂರು ಆನಂದರಾವ್, ಬಿ.ವಿ.ಕಕ್ಕಿಲ್ಲಾಯ ಮುಂತಾದ ಅನೇಕ ಮಹನೀಯರುಗಳು ಮೇಲ್ಮನೆ ಸದಸ್ಯರಾಗಿದ್ದರು. ಗಂಭೀರ ಚರ್ಚೆಗಳು ನಡೆಯಬೇಕು ಎನ್ನುವ ಕಾರಣಕ್ಕಾಗಿಯೇ ವಿಧಾನ ಪರಿಷತ್‌ ಅನ್ನು ವಿಶಿಷ್ಟವಾಗಿ ರಚಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞರಾದವರು, ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ.11 ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ. ಭಾರತದಲ್ಲಿ ಒಟ್ಟು ೭ (೬?) ರಾಜ್ಯಗಳಲ್ಲಿ ವಿಧಾನ ಪರಿಷತ್ ಕಾರ್ಯ ನಿರ್ವಹಿಸುತ್ತಿವೆ. ತಮಿಳು ನಾಡು ರಾಜ್ಯದಲ್ಲೂ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್'ನ ಒಟ್ಟು ಸದಸ್ಯರ ಸಂಖ್ಯೆ ೭೫. ಸದಸ್ಯರ ಕಾರ್ಯಾವದಿ ೬ ವರ್ಷ. ಇದರಲ್ಲಿ ೧/೩ ನೇ ಭಾಗದಷ್ಟು ಸದಸ್ಯರು ಪ್ರತಿ ೨ ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ಈ ಕಾರಣದಿಂದ, ವಿಧಾನ ಪರಿಷತನ್ನು ಸ್ಥಿರ ಅಥವಾ ಖಾಯಂ ಸಭೆ ಎಂದು ಕರೆಯಲಾಗುತ್ತದೆ.(ಭಾರತದ ರಾಜ್ಯಾಂಗ) == ವಿಧಾನ ಪರಿಷತ್ ಕಾರ್ಯ ನಿರ್ವಹಿಸುವ ರಾಜ್ಯಗಳು == == ಕರ್ನಾಟಕ ವಿಧಾನ ಪರಿಷತ್`ನ ರಚನೆ == ಗಂಭೀರ ಚರ್ಚೆಗಳು ನಡೆಯಬೇಕು ಎನ್ನುವ ಕಾರಣಕ್ಕಾಗಿ ವಿಧಾನ ಪರಿಷತ್‌ ಅನ್ನು ವಿಶಿಷ್ಟವಾಗಿ ರಚಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್‌ಅನ್ನು ಈ ಕೆಳಕಂಡಂತೆ ರಚಿಸಲಾಗುತ್ತದೆ. ಸಮಾಜಸೇವೆ, ಸಹಕಾರ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಿಂದ ತಜ್ಞರನ್ನು ರಾಜ್ಯ ಸರ್ಕಾರದ ಶಿಫಾರಸಿನಂತೆ ರಾಜ್ಯಪಾಲರು ನೇಮಕ ಮಾಡಬೇಕು ಎಂಬ ನಿಯಮವಿದೆ. ಶಿಕ್ಷಣ ಕ್ಷೇತ್ರದ ಪ್ರಮುಖರು, ಪದವೀಧರ ಕ್ಷೇತ್ರದ ತಜ್ಞರು ಹಾಗೂ ಸ್ಥಳೀಯ ಸಂಸ್ಥೆಗಳ ಅನುಭವಿಗಳು ಮೇಲ್ಮನೆ ಸದಸ್ಯರಾಗಬೇಕು ಎಂಬ ಉನ್ನತ ಆಲೋಚನೆಯಿಂದ ಹೀಗೆ ಮಾಡಲಾಗಿದೆ. ಹಿಂದೆ ಮೇಲಿನ ನಿಯಮಕ್ಕೆ ಅನುಗುಣವಾಗಿ, ಡಿ.ವಿ.ಜಿ., ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಸಿದ್ಧಲಿಂಗಯ್ಯ ಮುಂತಾದ ಸಾಹಿತಿಗಳೂ ಮೇಲ್ಮನೆ ಸದಸ್ಯರಾಗಿದ್ದರು. ಎಚ್‌.ನರಸಿಂಹಯ್ಯ, ಎಂ.ಪಿ.ಎಲ್‌.ಶಾಸ್ತ್ರಿ, ಪದ್ಮಾವತಿ ವಿಠಲರಾವ್, ಏಜಾಸುದ್ದೀನ್‌ ಮುಂತಾದ ಶಿಕ್ಷಣ ತಜ್ಞರೂ ಇಲ್ಲಿದ್ದರು. ಎಂ.ವೆಂಕಟಕೃಷ್ಣಯ್ಯ, ಖಾದ್ರಿ ಶಾಮಣ್ಣ, ಪಿ.ರಾಮಯ್ಯ ಅವರಂತಹ ಹಿರಿಯ ಪತ್ರಕರ್ತರೂ ಮೇಲ್ಮನೆ ಸದಸ್ಯರಾಗಿದ್ದರು. ಮಲ್ಲಿಕಾರ್ಜುನ ಮನ್ಸೂರ್‌, ಗಂಗೂಬಾಯಿ ಹಾನಗಲ್‌, ಕೆ.ಸಿ.ರೆಡ್ಡಿ, ಎಚ್‌.ಬಿ.ಗುಂಡಪ್ಪ, ಕೆ.ಬಿ.ಮಲ್ಲಾರಾಧ್ಯ, ಸಿ.ಹಯವದನರಾವ್, ಜೆ.ಮಹಮದ್‌ ಇಮಾಂ, ಕೆ.ಟಿ.ಪುಟ್ಟಣ್ಣ ಚೆಟ್ಟಿ, ಎಸ್‌.ನಿಜಲಿಂಗಪ್ಪ ಮುಂತಾದ ಹಿರಿಯರು ಮೇಲ್ಮನೆ ಸದಸ್ಯರಾಗಿದ್ದರು. == ಎಲ್ಲಾ ಸದಸ್ಯರ ಬಲಾಬಲ == ಸರ್ಕಾರದ ತಾಣ : // ಸರ್ಕಾರದ ತಾಣದಲ್ಲಿ- ಪಕ್ಷಗಳ ಬಲಾಬಲ -31-5- 19 ://....//. ಭಾರತೀಯ ಜನತಾ ಪಾರ್ಟಿ (ಭಾ.ಜ.ಪ) 18 ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ (ಭಾ.ರಾ.ಕಾಂ)38 ಜನತಾದಳ(ಜಾತ್ಯಾತೀತ) (ಜಡಿಎಸ್) - 16 == ಉಪ ಚುನಾವಣೆ ೨೦೧೭ == ಆಗ್ನೇಯ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 21 ಸಾವಿರ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪ್ತಿ ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ (ಫೆ.3) ಮತದಾನ ನಡೆದಿದೆ. ಈ ಕ್ಷೇತ್ರ ಪ್ರತಿನಿಧಿಸಿದ್ದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆ ಆಗಿದ್ದರಿಂದ ಅವಧಿಗೆ ಮೊದಲೇ ಈ ಚುನಾವಣೆ ಬಂದಿದೆ. ಕಾಂಗ್ರೆಸ್‌ ಟಿ.ಎಸ್‌. ನಿರಂಜನ್‌, ಬಿಜೆಪಿ ಪಿ.ಆರ್‌. ಬಸವರಾಜು, ಜೆಡಿಎಸ್‌ ರಮೇಶ್‌ ಬಾಬು ಅವರನ್ನು ಕಣಕ್ಕಿಳಿಸಿದೆ. ಅಲ್ಲದೆ, ಜೆಡಿಎಸ್‌ಗೆ ಬಂಡಾಯದ ಹರಿಹರದ ಜೆಡಿಎಸ್‌ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವರ ಸಹೋದರ ಅರವಿಂದ ಅವರು ಸ್ಪರ್ಧೆಯಲ್ಲಿದ್ದಾರೆ. === ಫಲಿತಾಂಶ === 8 , 2017 ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್‌ಬಾಬು ಜಯಗಳಿಸಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ ಯಿಂದ ಜೆಡಿಎಸ್‌ ಕಸಿದುಕೊಂಡಿದೆ. ಜೆಡಿಎಸ್‌ನ ರಮೇಶ್ ಬಾಬು 1,611 ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ಬಿಜೆಪಿಯ ಪಿ.ಆರ್‌. ಬಸವರಾಜು (ಪೆಪ್ಸಿ) ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಿರಂಜನ್ ಠೇವಣಿ ಕಳೆದುಕೊಂಡರು. ರಮೇಶ್‌ ಬಾಬು 7,810 ಮತಗಳನ್ನು ಪಡೆದರೆ ಬಸವರಾಜು 6,199 ಮತ ಗಳಿಸಿದರು. ಮೊದಲ ಸುತ್ತಿನ ಪ್ರಾಶಸ್ತ್ಯ ಮತದಲ್ಲಿ ಯಾವ ಅಭ್ಯರ್ಥಿಯೂ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯದ ಕಾರಣ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಿತು. ಅಂತಿಮವಾಗಿ ರಮೇಶ್ ಬಾಬು ಗೆಲುವು ಪಡೆದರು. ಮಂಗಳವಾರ ಬೆಳಗಿನ ಜಾವ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 1,237 ಮತಗಳು ಅಸಿಂಧುವಾದವು. 22 ನೋಟಾ ಮತಗಳು ಚಲಾವಣೆಯಾಗಿದ್ದವು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ರಮೇಶಬಾಬು 20 ವರ್ಷದಿಂದ ಜೆಡಿಎಸ್‌ನಲ್ಲಿದ್ದು, ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ಏಳು ವರ್ಷದಿಂದ ಪಕ್ಷದ ರಾಜ್ಯ ವಕ್ತಾರರಾಗಿ ಕೆಲಸ ಮಾಡುತ್ತಿರುವ ಅವರು, ಜೆಡಿಎಸ್‌ ವಿದ್ಯಾರ್ಥಿ ಘಟಕ, ಯುವ ಘಟಕ, ವಕೀಲರ ಘಟಕಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾ ಮಂಡಳದಲ್ಲಿ ನಿರ್ದೇಶಕರೂ ಆಗಿದ್ದಾರೆ. == ನೋಡಿ == ಕರ್ನಾಟಕ ವಿಧಾನ ಪರಿಷತ್ತಿನ ನಾಮಕರಣಗೊಂಡ ಸದಸ್ಯರ ಪಟ್ಟಿ ಸದಸ್ಯರು : ಕರ್ನಾಟಕ ವಿಧಾನ ಪರಿಷತ್ ಕರ್ನಾಟಕ ವಿಧಾನ ಪರಿಷತ್ ೨೦೧೩ ರಿಂದ ೨೦೧೬ ಕರ್ನಾಟಕ ವಿಧಾನಸಭೆ --ನೋಡಿ ಕರ್ನಾಟಕ ವಿಧಾನಸಭೆ ಚುನಾವಣೆ, 2013 ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ ಕರ್ನಾಟಕ ವಿಧಾನ ಪರಿಷತ್ ೨೦೧೮ == ಆಧಾರ == ಕರ್ನಾಟಕ ಚುನಾವಣಾ ಕಮಿಶನ್ ರಿಂದ ಅಧಿಕೃತ ಘೋಷಣೆ --ವರದಿ ಪ್ರಜಾವಾಣಿ